ಇಂದು ನಾಗರ ಪಂಚಮಿ; ಬನ್ನಿ ನಾಗಪ್ಪನನ್ನು ಉಳಿಸೋಣ- ಆ.14: ಇಂದು ಎಲ್ಲೆಡೆ ಸಡಗರ, ಸಂಭ್ರಮದಿಂದ ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ. ಆಷಾಢ ಕಳೆದು ನಾಗರಪಂಚಮಿಯೊಂದಿಗೆ ಶ್ರಾವಣ ಆರಂಭವಾಗಿದೆ. ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂತಲೂ ಕರೆಯುವ ನಾಗರ ಪಂಚಮಿಯನ್ನು ಹೆಂಗೆಳೆಯರು ನೇಮ, ನಿಷ್ಠೆಯಿಂದ ಆಚರಿಸುವ ದೃಶ್ಯ ಸಾಮಾನ್ಯ. ಈ ಬಾರಿ ನಾಗರ ಪಂಚಮಿ ಶನಿವಾರ ಬಂದಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ವಿಶೇಷವಾಗಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳಲ್ಲಿ ಹಬ್ಬದ ವಾತಾವರಣ. ಹಬ್ಬ ಆಚರಿಸುವುದರಿಂದ ನಾಗದೋಷ ನಿವಾರಣೆಯಾಗುತ್ತದೆ, ಕಷ್ಟಗಳು ಪರಿಹಾರವಾಗುತ್ತದೆ ಎಂಬುದು ನಂಬಿಕೆ. ಬೆಳಗ್ಗೆ ಬೇಗನೆ ಎದ್ದು ಮಂಗಳ ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ಉಟ್ಟು ನಾಗಪ್ಪನಿಗೆ ಹಾಲೆರುವ ದೃಶ್ಯ ಇಂದು ನಗರದದೆಲ್ಲೆಡೆ ಕಂಡುಬಂದಿತು. ಅಣ್ಣ ತಮ್ಮಂದಿರ ಒಳಿತಿಗಾಗಿ ಅಕ್ಕತಂಗಿಯರು ನಾಗದೇವರನ್ನು ಪೂಜಿಸುವುದೇ ಈ ಹಬ್ಬದ ವಿಶೇಷ. ನಾಗರ ಕಟ್ಟೆಗೆ ಹಾಲು, ಮೊಸರು, ತುಪ್ಪ, ಜೇನಿನಿಂದ ಅಭಿಷೇಕವನ್ನು ಮಾಡಲಾಗುತ್ತದೆ. ಹುತ್ತಕ್ಕೆ ಹಾಲನ್ನು ಎರೆದು ಭಯ, ಭಕ್ತಿಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಎಳ್ಳು, ಅಕ್ಕಿ ಮತ್ತು ಬೆಲ್ಲ ಮಿಶ್ರಿತ ಪ್ರಸಾದವನ್ನು ಹಂಚುವ ದೃಶ್ಯಗಳು ಕಂಡುಬಂದವು. ಹೀಗೆ ಮಾಡುವುದರಿಂದ ಸೋದರರ ಆಯುಸ್ಸು ವೃದ್ಧಿಸುತ್ತದೆ ಎಂಬುದು ನಂಬಿಕೆ. ಕೆಂಪು ನೀರಿನಲ್ಲಿ ಸೋದರರಿಗೆ ಆರತಿ ತೆಗೆದು ದೃಷ್ಟಿ ತೆಗೆದು ಅರಿಶಿಣದಾರದಲ್ಲಿ ಹೂವನ್ನು ಸೋದರರ ಕೈಗೆ ಕಟ್ಟಿ ಅಕ್ಕತಂಗಿಯರು ಸಂಭ್ರಮಿಸುತ್ತಿದ್ದರು. ಬನ್ನಿ ನಾಗಪ್ಪನನ್ನು ರಕ್ಷಿಸೋಣ ಹಲವಾರು ಜಾತಿಯ ಸರ್ಪಗಳು ಇಂದು ಅವಸಾನದ ಅಂಚಿನಲ್ಲಿವೆ. ಜೀವ ಸರಪಳಿಯಲ್ಲಿ ಸರ್ಪಗಳ ಪಾತ್ರ ಅನನ್ಯ.ಒಂದೆಡೆ ಹಾವುಗಳನ್ನು ಪೂಜಿಸುತ್ತಿದ್ದರೆ ಮತ್ತೊಂದೆಡೆ ಅಮಾನವೀಯವಾಗಿ ಸಾಯಿಸಲಾಗುತ್ತಿದೆ. ಹಾವಾಡಿಗರ ಕೈಗೆ ಸಿಕ್ಕ ಎಷ್ಟೋ ಹಾವುಗಳು ನೋವು ಅನುಭವಿಸುತ್ತಿವೆ. ಈ ನಾಗಪಂಚಮಿಯಂದು ಹಾವುಗಳನ್ನು ರಕ್ಷಿಸುವ ಪಣ ತೊಡೋಣ. ಮನೆ ಅಥವಾ ಸುತ್ತಮುತ್ತ ಹಾವು ಕಂಡ ತಕ್ಷಣ ಗಾಬರಿ, ಭಯ ಬೀಳಬೇಡಿ. ಎಲ್ಲ ಹಾವುಗಳೂ ವಿಷಪೂರಿತವಲ್ಲ ಎಂಬುದು ನಿಮ್ಮ ಗಮನದಲ್ಲಿರಲಿ. ರೈತನ ಮತ್ತೊಬ್ಬ ಮಿತ್ರ ಈ ಹಾವುಗಳು. ಅವುಗಳನ್ನು ಕೊಲ್ಲದೆ ಹಾವು ಹಿಡಿಯುವರ ಸಹಾಯದಿಂದ ಅದನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿ.
Read more at: http://kannada.oneindia.in/news/2010/08/14/naga-panchami-save-snakes-from-atrocities.html
No comments:
Post a Comment